ಕವನ: ರೈತ


ಓ ರೈತ, ನೀ ಅನ್ನದಾತ
ಅಂಜದಿರು, ಅಳುಕದಿರು
ಬರುವುದು ಒಳ್ಳೆಯ ಸಮಯ
ಮಾನವ ಕುಲಕ್ಕೆ ನೀನೇ ಒಡೆಯ 

ಕುಗ್ಗದಿರು ಬರುವ ಕಷ್ಟಗಳಿಗೆ
ಬದಲಾಗದಿರು ಲಾಭ ನಷ್ಟಗಳಿಗೆ
ಸ್ನೇಹಿತ ನೀನು ಮೂಕಪ್ರಾಣಿಗಳಿಗೆ 
ಚೊಚ್ಚಲ ಮಗನಾದೆ ಭೂತಾಯಿಗೆ

ಬಿಸಿಲ ಝಳಕ್ಕೆ ಬೀಳುವ ನಿನ್ನ
ಬೆವರ ಹನಿ ರಕ್ತಕ್ಕೆ ಸಮ
ಮಳೆಯಲ್ಲಿ ಮಿಂದು, ಚಳಿಯಲ್ಲಿ ನಡುಗಿ
ಬೆಳೆಯ ಬೆಳೆಯುವೆ, ನಿನಗೆ ಯಾರು ಸಮ

ಸಾಗುತ್ತಿಹುದು ನಿನ್ನಯ ಬದುಕು
ನೀರಿನ ಮೇಲಿನ ಗುಳ್ಳೆಯಂತೆ
ಅಮರವಾಗಲಿ ನಿನ್ನಯ ಹೆಸರು
ಬಾನಿನಲ್ಲಿರುವ ಧ್ರುವತಾರೆಯಂತೆ 

ಜೋಡೆತ್ತುಗಳ ಜೊತೆ ನೊಗ
ನೇಗಿಲು ಹಿಡಿದ ನಿನಗೆ ನನ್ನ ನಮನ
ನಿನ್ನ ನಿಸ್ವಾರ್ಥ ಕಾಯಕಕ್ಕೆ ಅರ್ಪಣೆ
ನನ್ನ ಈ ಪುಟ್ಟ ಕವನ

    ಯತೀಶ್ವರ ಆರ್ ಗಂಗವಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ